ಗಾರ್ಡು ತಂದ ತುಂಡು ಎರಡಡಿ ಉದ್ದ ಒಂದಡಿ ದಪ್ಪದ ದಿಮ್ಮಿ. ಬಲವಂತವಾಗಿ ಅದನ್ನು ಡೈಸಿಯ ಹೆಗಲ ಮೇಲೆ ಏರಿಸಿಟ್ಟು, "ಹಸಿಯ ವಾಸನೆಯನ್ನು ಮೂಸಿ ನೋಡುತ್ತಿರು, ಶೀನು ನಿಲ್ಲುತ್ತದೆ" ಎಂದು ಒತ್ತಾಯಪಡಿಸಿದರು. ಪಾಪ, ತನಗಿಂತಲೂ ಭಾರವಾದ ಹೊರೆಯನ್ನು ಹೊತ್ತಂತೆ ಆಯಿತು ಅವಳಿಗೆ ದಿನ್ನೆಯಿಳಿದು ಬರುತ್ತಿದ್ದಾಗ ಸಣ್ಣ ಕುಂಟೆಯೊಂದರ ದಡಕ್ಕೆ ಬಂದೆವು. ಡೈಸಿ ಭಾರದ ಆಯಾಸದಿಂದ ಬಿಮ್ಮಿಯನ್ನು ಕೆಳಗಿಟ್ಟು, ಜೋಮು ಹಿಡಿದಿದ್ದ ರಟ್ಟೆಯನ್ನು ನೀವಿಕೊಳ್ಳುತ್ತ ನಿಂತಳು. ಕನ್ನರ್ವೇಟರು ಸ್ವಲ್ಪ ವಿಶ್ರಮಿಸಿಕೊಳ್ಳಿರಿ ಎಂದು ಹೇಳಿ ಭಾವೋದ್ರೇಕಗೊಂಡರು. *'ನಮ್ಮ ಭಾಸನ ರಾಮನಾಟಕ ಚಕ್ರದಲ್ಲೊಂದಾದ...'' ಎಂದು ಯಾವುದೋ ಪದ್ಯವೊಂದನ್ನು ಎತ್ತಿದರು. (ನಮ್ಮ ಹುಡುಗರ ಸ್ಥಿತಿ ಬಹಳ ಪೇಚಾಟಕ್ಕಿಟ್ಟುಕೊಂಡಿತು. ರಾಮ, ನಾಟಕ, ಚಕ್ರ, ಎಂಬ ಬಿಡಿ ಮಾತುಗಳು ಅರ್ಥವಾದವೇ ಹೊರತು ಸಂದರ್ಭಗೊತ್ತಾಗಲಿಲ್ಲ. ಭಾಸ ಎಂಬ ಮಾತನ್ನು ಅಭಾಸ ಎಂದು ಅರ್ಥಮಾಡಿಕೊಂಡವರಿಗೆ ಹೇಗೆ ತಾನೆ ತಿಳಿದೀತು?) ಚಾಕೃರ ಅಭಿನಯ ಮಾಡತೊಡಗಿದರು. (ಎಳೆತನದಲ್ಲಿ ಕೂಡಿಯಾಟ್ಟಮ್ ಕಲಿತಿದ್ದರಂತೆ.)* ಅವರ ಸಿಬ್ಬಂದಿಯಲ್ಲಿದ್ದವನೊಬ್ಬ ವಿಧೇಯನಾಗಿ ಪದ್ಯವನ್ನು ರಾಗವಾಗಿ ಎಳೆಯ ತೊಡಗಿದ. "ಸಿಬ್ಬಂದಿಯಲ್ಲವೂ ಬಂದಿರಲಿ'' ಎಂದ ಇವರ ಆಜ್ಞೆಯ ತಾತ್ಪರ್ಯ ಈಗ ಇನ್ನೂ ಸ್ವಲ್ಪ ಅರ್ಥವಾಯಿತು.
ಹಿಂದಿನ ದಿನ ಒರುಕುಂಬನ್ ಕಾಡಿನಲ್ಲಿ ಎಲಿಯೊಕಾರ್ಪಸ್ (Elacocarpus) ಎಂಬ ಮರವನ್ನು ಕಂಡಿದ್ದೆವು. ನಮ್ಮೊಡನಿದ್ದ ಡಿಸ್ಟ್ರಿಕ್ಟ್ ಫಾರೆಸ್ಟ್ ಆಫೀಸರು ಅದರ ಕಾಯೊಂದನ್ನು ಹಲ್ಲಿನಿಂದ ಕಡಿದು ಅದನ್ನು ತಿನ್ನಬಹುದೆಂದು ಹೇಳಿದ್ದರು. ಇದು ಮೈಸೂರು ಕಾಡುಗಳಲ್ಲಿ ಸಟ್ಟಗ ಎಂದು ಹೇಳುವ ಮರಜಾತಿಗೆ ಸೇರಿದ್ದು: ಇದರ ಕಾಯಿಗಳನ್ನು ತಿನ್ನುತ್ತಾರೆಂದು ನಮಗೆ ತಿಳಿದಿರಲಿಲ್ಲ. ಈಗ ನಮ್ಮೆದುರಿಗೆ ಅದೇ ಮರ ಬೆಳೆದಿತ್ತು. "ಈ ಮರದ ಕಾಯಿಗಳನ್ನು ತಿನ್ನುತ್ತಾರೆಯೆ?'' ಎಂದು ಕನ್ನರ್ವೇಟರನ್ನು ಕೇಳಿದೆ. 'ಯಾರು ನಿಮಗೆ ಹೇಳಿದ್ದು?''
ನಿಮ್ಮ ಡಿಸ್ಟ್ರಿಕ್ ಫಾರೆಸ್ಟ್ ಆಫೀಸರು'' ಎಂದೆ.
''ಅವನೊಬ್ಬ ಗಾರ್ದಭ'' ಎಂದು ಸಂಸ್ಕೃತದಲ್ಲಿಯೇ ಹೇಳಿ, "ಅದು ವಿಷ, ಅದನ್ನು ತಿಂದರೆ ಜನ ಸಾಯುತ್ತಾರೆ" ಎಂದರು. ಇದನ್ನು ಕೇಳಿಸಿಕೊಂಡ ಡಿಸ್ಟಿಕ್ಸ್ ಫಾರೆಸ್ಟ್ ಆಫೀಸರು, ಅವನ ಕೆಳಗಿನ ದರ್ಜೆಯ ಅಧಿಕಾರಿಯಾದ ರೇಂಜರನ್ನು ದುರುದುರು ನೋಡಿ "ನೀನೊಂದು ಹೇಳಿ ಮಾಡಿಸಿದ ಕತ್ತೆ. ನೀನು ತಾನೆ ನನಗೆ ಹೇಳಿದ್ದು!'' ಎಂದು ಬೈದ. ರೇಂಜರು ಫಾರೆಸ್ಟರನನ್ನು ಗದರಿಸಿ "ನೀನು ಅಸಲು ಕತ್ತೆ" ಎಂದ.
ಫಾರೆಸ್ಟರು ಗಾರ್ಡಿಗೆ ಇದೇ ಪ್ರಯೋಗವನ್ನು ಮಾಡಿ “ನೀನು ತಾನೆ ನನಗೆ ಹೇಳಿದ್ದು?'' ಎಂದ. ಗಾರ್ಡು ಕಾವಲುಗಾರನನ್ನು ತಿವಿದು “ಇದೆಲ್ಲವೂ ನಿನ್ನಿಂದ ಆದದ್ದು. ನೀನು ಮೆದುಳಿಲ್ಲದ ಕತ್ತೆ, ಒದ್ದು ಬಿಡುತ್ತೇನೆ. ಮುಠಾಳ" ಎಂದ. ಕಾವಲುಗಾರ ನಮ್ಮೊಡನೆ ಬಂದಿದ್ದ ಮರಹತ್ತುವವನನ್ನು ಕರೆದು "ಹೊಟ್ಟೆಗೆ ಏನನ್ನು ತಿಂದು ಹೀಗೆ ಬೆಳೆದಿದ್ದೀಯೋ, ಕೊಳೆತ ಮೆದುಳಿನ ಕತ್ತೆ! ನೀನು ತಾನೆ ನನಗೆ ಹೇಳಿದ್ದು, ಇದರ ಕಾಯನ್ನು ತಿನ್ನುತ್ತಾರೆಂದು?'' ಎಂದು ತನ್ನ ಮೇಲಿನ ಅಪವಾದವನ್ನು ತೀರಿಸಿಕೊಂಡ. ಮರಹತ್ತುವವನಿಗೆ ಆಶ್ಚರ್ಯವಾಯಿತು. "ನಾನು ತೋರಿಸಿದ್ದು ಈ ಮರವೇ ಅಲ್ಲ.
ಇದು ವಿಷ. ಮೀನನ್ನು ಕೊಲ್ಲುವುದಕ್ಕೆ ಉಪಯೋಗಿಸುತ್ತೇವೆ. ನಾನು ತೋರಿಸಿದ ಮರವೇ ಬೇರೆ'' ಎಂದ. ಕಾವಲುಗಾರ ಹಲ್ಲು ಕಚ್ಚಿ ''ಇನ್ನು ಮೇಲೆ ಹುಷಾರ್!.. ಎಂದು ಕಾರಣವಿಲ್ಲದ ಬೆದರಿಕೆ ಹಾಕಿದ. ಮರಹತ್ತುವವನು ತನ್ನೊಳಗೇ ಗೊಣಗುಟ್ಟಿಕೊಂಡು ಸುಮ್ಮನಾದ.
ಗಾರ್ದಭ ಚಕ್ರ ಹೀಗೆ ಹೊರಳುತ್ತಿದ್ದಾಗ ಕನ್ನರ್ವೇಟರು ಕಂದಯ್ಯನನ್ನು ಬಲವಾಗಿ ಹಿಡಿದುಬಿಟ್ಟಿದ್ದರು. ಚೋರನೂರಿನಲ್ಲಿ ತಮ್ಮದೊಂದು ಧನ್ವಂತರೀ ಆಶ್ರಮವಿರುವುದೆಂದೂ, ಅಲ್ಲಿ ಹೋದರೆ ಪೊಟ್ಟು ಹಾಕಿಕೊಳ್ಳಲು ಕೆಲವು ಮೂಲಿಕೆಗಳನ್ನು ಕೊಡುತ್ತಾರೆಂದೂ, ಬಲವಂತ ಮಾಡಿ ಒಂದು ಚೀಟಿಯನ್ನು ಬರೆದುಕೊಟ್ಟರು. ''ನಾನು ಇನ್ನು ಹೊರಡುತ್ತೇನೆ. ಮೈ ಬಗ್ಗಿಸಿ ಕೆಲಸ ಮಾಡಿ. ಗಿಡಮೂಲಿಕೆಗಳನ್ನು ಚೆನ್ನಾಗಿ ತಿಳಿದುಕೊಂಡು ಹೋಗಿ. ಆಯುರ್ವೇದೌಷಧಗಳನ್ನು ಸೇವಿಸದೆ ಪರಂಗಿ ಮದ್ದುಗಳ ಸೇವನೆಯನ್ನು ಮಾಡಿದರೆ ನಿಮ್ಮ ಆಯುಷ್ಯದಲ್ಲಿ ಅರ್ಧ ಭಾಗ ತರ್ಪಣವಾಗಿ ಬಿಡುತ್ತದೆ. ಜೋಕೆ!'' ಎಂದು ಆಶೀರ್ವಾದ ಮಾಡಿ ಹೋದರು. ಗಾರ್ಜು ಮಾತ್ರ ನಮ್ಮೊಂದಿಗೆ ಉಳಿದ.
ಬಲವಂತದ ಸೆರೆಯಿಂದ ಬಿಡುಗಡೆಯಾದವರಷ್ಟು ಹರ್ಷಗೊಂಡೆವು. ಹುಡುಗರು ಸಂದರ್ಭವನ್ನರಿತು ಮುಚ್ಚಿಕೊಂಡಿದ್ದ ಬಾಯನ್ನು ತೆರೆದರು. ಶಿಂಗನ ಆಶ್ಚರ್ಯವನ್ನು ಹೇಳತೀರದು: ''ಅಬ್ಬಬ್ಬ! ಅರಣ್ಯ ಇಲಾಖೆಯಲ್ಲಿ ಎಷ್ಟೊಂದು ಕತ್ತೆಗಳು ಮೇಯುತ್ತಿವೆ!'' ವೇಂಬುಲಿ: "ಅದೂ ಎಷ್ಟೊಂದು ದರ್ಜೆಗಳ ಕತ್ತೆಗಳು!'' ಸಲೀಮ್ಪಾಷಾ 'ಕನ್ನರ್ವೇಟರದು ಯಾವ ದರ್ಜೆಯೋ?'' ಶಿಂಗ: ''ಅದರ ಬಗ್ಗೆ ಚೀಫ್ ಕನ್ನರ್ವೇಟರನ್ನು ಕೇಳಬೇಕು.'" ಚಿದಂಬರ: ''ನೀನು ಇನ್ನೊಂದು ಕತ್ತೆ, ಅವರ ಅಭಿಪ್ರಾಯವನ್ನು ಬೇರೆಯಾಗಿ ಕೇಳಬೇಕೆನ್ನುತ್ತೀಯಲ್ಲ. ನೀನೇ ಊಹಿಸಿಕೊಳ್ಳಲಾಗದೆ?''
ಲೀಚಿನ ಮುನ್ಸೂಚನೆ ಹೀಗೆಂದವನು ಓಡಿಹೋಗಿ ಗುಂಪಿನ ಮುಂದಾಳಾಗಿ ಹೋಗುತ್ತಿದ್ದ ಫಾರೆಸ್ಟ್ರನ್ನು ಸೇರಿಕೊಂಡ. ಇಲ್ಲದಿದ್ದರೆ ಶಿಂಗನ ಕೈಯಿಂದ ಚಿದಂಬರನ ತಲೆ ಅಪ್ಪಳಿಸಿ ಹೋಗುತ್ತಿತ್ತು. ಶಿಂಗನ ಪೂರ್ತಿ ಹೆಸರು ಅಳಶಿಂಗಾಚಾರ್. ಅದನ್ನು ಮೊಟಕು ಮಾಡಿಕೊಂಡು ಶಿಂಗ ಎಂತಲೇ ಕರೆಸಿಕೊಳ್ಳುತ್ತಾನೆ. ಮುಖವಂತೂ ಸ್ವಲ್ಪ ಹೆಸರಿಗೆ ತಕ್ಕಂತೆಯೇ; ಕೆಂಗೂದಲು; ಕ್ರಾಪೂ ಅಲ್ಲ, ಜಟೆಯೂ ಅಲ್ಲ, ಎರಡಕ್ಕೂ ಮಧ್ಯದಲ್ಲಿ ಚುಂಗುಚುಂಗಾದ ತಲೆಗೂದಲು; 34 ವಾರ ನೋಡಿ ಕ್ಷೌರಮಾಡಿಸಿಕೊಳ್ಳುವವನಾದ್ದರಿಂದ ಕೆಂಬಣ್ಣದ ಗಡ್ಡ ಮೀಶೆಗಳು ಸೊಂಪಾಗಿ ಬೆಳೆದಿರುತ್ತವೆ.
ಪರೀಕ್ಷೆಗೆ ಮೂರು ತಿಂಗಳು ಮೊದಲಿನಿಂದಲೂ (ಈಗಿರುವಂತೆ) ಕೇಸರಗಳನ್ನು ಬೆಳೆಸುತ್ತಾನೆ. ವಯಸ್ಸಿಗೆ ಮಿಂಚಿದ ಎತ್ತರ ಸುತ್ತಳತೆಗಳ ದೇಹ. ಚಿದಂಬರನದು ವಯಸ್ಸಿಗೆ ಸಾಲದ ಬೆಳವಣಿಗೆ, ಕೂನಾಶಿ ನಿಲುವು, ಗುಂಗುರು ತಲೆಗೂದಲು, ಕಿರಿಯ ಹಣೆ, ನಡ್ಲಿ ಮೂಗು, ಎಲ್ಲವಕ್ಕೂ ಮುಂದೆ ಚಾಚಿರುವ ದವಡೆ, ಶಿಂಗನ ನಡುವಿನಷ್ಟು ಎತ್ತರ. ಇವರಿಬ್ಬರೂ ಅಣ್ಣಾಮಲೆ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. ಓದಿ ಸ್ನಾತಕೋತ್ತರ ವ್ಯಾಸಂಗಕ್ಕೆ ನಮ್ಮಲ್ಲಿಗೆ ಬಂದಿರುವವರು. ಇಬ್ಬರಿಗೂ ಐದಾರು ವರ್ಷಗಳ ನಿಕಟ ಪರಿಚಯ.
ಒಬ್ಬರನ್ನೊಬ್ಬರು ಲೇವಡಿ ಮಾಡುವುದು ಸಾಮಾನ್ಯವಾಗಿ ಬಿಟ್ಟಿತ್ತು. ಇಬ್ಬರೂ ವಿನೋದ ಪ್ರಿಯರಾಗಿ ದ್ದುದರಿಂದ ಇವರ ಮಾತುಕತೆಗಳು ಯಾರನ್ನೂ ವಿರೋಧಿಗಳನ್ನಾಗಿ ಮಾಡಿರಲಿಲ್ಲ. ಡೈಸಿಗೆ ಕೇಜೇ ಎಂಬ ಅಡ್ಡ ಹೆಸರಿಟ್ಟಿದ್ದವರು ಇವರೇ. (ಅಮೆರಿಕದ ಸಂಕೇತ ಭಾಷೆಯಲ್ಲಿರುವ Calamity Jane, ಎಂದರೆ ಆಪತ್ತುದಾಯಕಿ, ಎಂಬುದರ ಹ್ರಸ್ವಾಕ್ಷರಗಳು).
ನೀಳವಾಗಿ ಬೆಳೆದಿದ್ದ ಕೈಗಳನ್ನು ಸುತ್ತಲೂ ಬೀಸುತ್ತ ಅಷ್ಟೇ ಉದ್ದವಾದ ಕಾಲುಗಳನ್ನು ನಾಲ್ಕು ದಿಕ್ಕುಗಳಿಗೂ ಝಾಡಿಸುತ್ತ ಓಡಾಡುವುದೇ ಇವಳ ರೀತಿ. ಲ್ಯಾಬೊರೆಟರಿಯಲ್ಲಿ ಅದೆಷ್ಟೋ ಸಾಮಾನುಗಳು ಇವಳ ಹಾರಾಟಕ್ಕೆ ಬಲಿಯಾಗಿ ಹೋಗಿವೆ. ಆದರೂ ತನ್ನ ವಿಷಯದಲ್ಲಿಟ್ಟುಕೊಂಡಿರುವ ದೃಢವಾದ ಆತ್ಮವಿಶ್ವಾಸ ಸ್ವಲ್ಪವೂ ಕುಂದಿಲ್ಲ. ಬೇಡವೆಂದರೂ ಕೇಳದೆ ಚಾಲಕುಡಿಯಲ್ಲಿ ಎರಡು ಪೆಟ್ಟಿಗೆ ಗಳನ್ನು ಹೊರುತ್ತೇನೆಂದು ಹೋಗಿ ನೆಲಕ್ಕೆ ಕೆಡವಿದ್ದಳು.
ಆಟೆಂಡರಿಗೆ ಸಾಮಾನು ಎತ್ತಿಕೊಡಲು ಹೋಗಿ ಅವನು ಆಯತಪ್ಪಿ ಬೀಳುವುದಕ್ಕೆ ನೆರವಾದಳು. ಕಾಡಿಗೆ ಹೋದಾ ಗೆಲ್ಲ ಒಂದು ಕೈಲಿ ದೊಡ್ಡ ಕತ್ತರಿ, ಇನ್ನೊಂದು ಕೈಲಿ ಸಣ್ಣ ಮಚ್ಚು ಹಿಡಿದುಕೊಂಡು ಬರುತ್ತಾಳೆ.
ದಟ್ಟವಾದ ಕಾಡನ್ನು ಪ್ರವೇಶಿಸುತ್ತಿದ್ದೇವೆಂಬುದರ ಮುನ್ಸೂಚನೆಯೆಂಬಂತೆ ಒಂದೆರಡು ಲೀಚ್ ಹುಳುಗಳು ಕಾಣಿಸಿಕೊಂಡವು. ಶಿಂಗನಿಗೂ ಚಿದಂಬರನಿಗೂ ಈ ಜಂತುಗಳ ಪರಿಚಯವಿದ್ದುದನ್ನು ಮೊದಲೇ ಕೇಳಿ ತಿಳಿದುಕೊಂಡಿದ್ದೆನಾದದ್ದರಿಂದ 'ಲೀಚನ್ನು ಕಂಡರೆ ಕೂಗಿಕೊಳ್ಳಬೇಡಿ, ಸುಮ್ಮನಿದ್ದು ಬಿಡಿ' ಎಂದು ಎಚ್ಚರಿಕೆ ಕೊಟ್ಟಿದ್ದೆ. ನನ್ನೆದುರಿಗೆ ಒಪ್ಪಿಕೊಂಡಿದ್ದರಾದರೂ ಲೀಚನ್ನು ಕಂಡೊಡನೆಯೆ ಧಾವಂತಪಟ್ಟುಕೊಂಡರು. ನಡೆಯನ್ನು ನಿಧಾನಮಾಡಿ "ಲೋ, ಶಿಂಗ, ನನ್ನ ಪೂ ಒಳಗೆ ಅದೇನೋ ಬುಳಬುಳ ಎನ್ನುತ್ತದೆಯೋ!'' ಎಂದ ಚಿದಂಬರ ತಿಂಗ ಚಿದಂಬರನ ತಲೆಯ ಮೇಲೆ ಒಂದು ಸಲ ಅಪ್ಪಳಿಸಿ ''ಮುಂಡೇದೇ, ಅದರ ಹೆಸರೆತ್ತಬೇಡವೋ!'' ಎಂದು ಹಲ್ಲು ಕಡಿದ, ಚಿದಂಬರ: ''ನಾನೆಲ್ಲೋ ಅದರ ಹೆಸರು ಹೇಳಿದೆ?'' ಶಿಂಗ: "ಬುಳಬುಳ ಎನ್ನುವುದು ಅದರ ಹೆಸರಲ್ಲದೆ ಮತ್ತೇನೋ?'' ಕೇಜೇಗೆ ಈ ಸಾಂಕೇತಿಕ ಭಾಷೆ ಅರ್ಥವಾಗಿ ಬಿಟ್ಟಿತು. ಒಡನೆಯೇ ಕೈಕಾಲುಗಳನ್ನು ಬೀಸುತ್ತ 'ಅಯ್ಯಯ್ಯೋ' ಎಂದು ಚೀರಿ ನೆಗೆದಳು. ಬಲಗೈಲಿದ್ದ ಕತ್ತರಿ ಹತ್ತು ಅಡಿ ದೂರ ಗಾಳಿಯಲ್ಲಿ ಹಾರಿಹೋಯಿತು. ಎಡಗೈಲಿದ್ದ ಮಚ್ಚು ಚಂಗನೆ ನೆಗೆದು ಬದಿಯಲ್ಲಿದ್ದ ಮರದ ಕೊಂಬೆಯಲ್ಲಿ ಸಿಕ್ಕಿಕೊಂಡಿತು. ಇವಳ ನೆಗೆತದ ರಭಸದಿಂದ ಹುಡುಗಿಯರಿಬ್ಬರು ಕಾಲುಜಾರಿ ಕುಸಿದುಬಿಟ್ಟರು. ಏನಾಯಿತೆಂದು ಅರಿಯುವುದಕ್ಕೆ ಮುಂಚೆಯೇ ಇಷ್ಟು ಅನಾಹುತ ನಡೆದು ಹೋಗಿದ್ದಿತು.
ಎಲ್ಲರನ್ನೂ ಸ್ವಲ್ಪ ನಿಲ್ಲಿ ಎಂದೆ. "ಲೀಚಿಗಾಗಿ ಭಯಪಡುವವರು ಇಲ್ಲಿಯೇ ಉಳಿಯಬಹುದು. ಫಾರೆಸ್ಟರೊಡನೆ ಬಿಡದಿಗೆ ಕಳುಹಿಸುತ್ತೇನೆ" ಎಂದು ಬೆದರಿಕೆ ಹಾಕಿದೆ. ನನ್ನ ಹೆಂಡತಿ ಡೈಸಿಯೊಂದಿಗೆ ಏನೋ ಮಾತನಾಡಿ ಅವಳ ಕತ್ತರಿಯನ್ನೂ ಮಚ್ಚನ್ನೂ ತನ್ನ ಚೀಲದಲ್ಲಿ ಹಾಕಿಕೊಂಡಳು. ಅನಾಹುತದಲ್ಲಿ ಕೊಂಚ ಭಾಗ ಕಡಿಮೆಯಾಯಿತು ಎಂದುಕೊಂಡು ಮುಂದೆ ನಡೆದೆವು.
ವೇಂಬುಲಿ ಮೂಗಿನ ಹೊಳ್ಳೆಗಳನ್ನು ಹಿಗ್ಗಿಸಿ ದೀರ್ಘವಾಗಿ ಉಸಿರೆಳೆದುಕೊಂಡು "ಅದೇನೋ ವಾಸನೆ ಬರುತ್ತಿದೆ'' ಎಂದ. ಡೈಸಿಗಂತೂ ತಲೆನೋವೇ ಬಂದಿತಂತೆ.
ಚಿದಂಬರ "ಶಿಂಗ ಪುಳಿಯೋಗರೆ ಹೊಡೆದು ಬಂದಾಗ ಇದೇ ವಾಸನೆಯನ್ನೆಬ್ಬಿಸುತ್ತಾನೆ'' ಎಂದು ಓಡಿಹೋಗಿ ಫಾರೆಸ್ಟರನ ಮರೆಹೊಕ್ಕ. ಚಿದಂಬರನನ್ನು ತಿಂದುಹಾಕುವಂತೆ ಶಿಂಗ ನೋಡಿದ; ಇನ್ನೊಂದೆರಡು ಸಲ ವಾಸನೆಯನ್ನು ಫ್ರಾಣಿಸಿ ಇದು ಕೊಳೆತು ನಾರುವ ಮಾಂಸದ ನಾತ, ರಾಮ ರಾಮಾ' ಎಂದು ಮೂಗು ಮುಚ್ಚಿಕೊಂಡ. ಚಂಪಕಳ ಮೂಗಿಗೆ ನಾತ ಬಂದಿತೋ ಇಲ್ಲವೋ, ಶಿಂಗನು ಆಡಿದ ಮಾತನ್ನು ಕೇಳಿದೊಡನೆಯೆ ಹುಪ್ಸ್, ಫೊಳ್, ಹುಪ್ಸ್ ಎಂಬ ಶಬ್ದಗಳನ್ನು ಹೊಮ್ಮುತ್ತ ವಾಂತಿ ಕಕ್ಕಿದಳು.
ಹುಡುಗಿಯರಲ್ಲಿ ಅನುಕಂಪನಾ ಪ್ರಮೇಯಗಳು ಸಾಮಾನ್ಯವಲ್ಲವೆ? ಮಿಕ್ಕ ಮೂವರು ಹುಡುಗಿಯರೂ ಇವಳನ್ನೇ ಅನುಸರಿಸಿದರು. ನನಗೆ ಸಾಕುಸಾಕಾಗಿ ಹೋಯಿತು. ಫಾರೆಸ್ಟರು ನನ್ನ ಪಾಡನ್ನು ಕಂಡು ಮರುಕಗೊಂಡವನಂತೆ ಬಂದು ಸಮಾಧಾನಪಡಿಸುವುದಕ್ಕಾಗಿ ಒಂದು ಕತೆ ಹೇಳಿದ: 'ಪಕ್ಕದೂರಿಗೆ ಹೋಗಿ ಗಂಟಲವರೆಗೂ ಶ್ರಾದ್ಧದೌತಣ ತಿಂದ ನಂಬೂದಿರಿಯೊಬ್ಬ ಕಾಡಿನ ಮೂಲಕ ಮನೆಗೆ ಹಿಂತಿರುಗುತ್ತಿದ್ದನಂತೆ.
ಕವಲೊಡೆದ ಮರವೊಂದರ ಬಳಿ ಕವಲಿನಲ್ಲಿ ಬಾಲವಾಡಿಸುತ್ತ ಆಚೆ ಮುಖಮಾಡಿಕೊಂಡು ನಿಂತಿದ್ದ ಹುಲಿಯನ್ನು ಕಂಡನಂತೆ. ಹುಲಿಯನ್ನು ದಾಟಿಹೋದರೆ ಇವನಿಗೆ ಅಪಾಯ; ದಾಟದೆ ಅಲ್ಲಿಯೇ ಉಳಿದರೆ ಮನೆ ಸೇರುವ ಹಾಗಿಲ್ಲ. ಅಲ್ಲಿಯೇ ನಿಂತಿದ್ದರೆ ಹುಲಿ ಹಿಂತಿರುಗಿ ನೋಡಿದರೂ ನೋಡಬಹುದು, ಪ್ರಾಣಾಪತ್ತು ಒದಗುತ್ತದೆ. ಹೀಗಾಗಿ, ಹಿಂದಿನಿಂದಲೇ ಮೆಲ್ಲಗೆ ಹೋಗಿ ಅದರ ಬಾಲವನ್ನು ಬಲವಾಗಿ ಎಳೆದು ಹಿಡಿದುಕೊಂಡನಂತೆ.
ಎಳತಕ್ಕೆ ಸಿಕ್ಕಿದ ಹುಲಿ ಎರಡು ಹೆಜ್ಜೆ ಹಿಂದಕ್ಕೆ ಸರಿದು ಕವಲು ಕಾಂಡವನ್ನು ಒತ್ತಿಕೊಂಡದ್ದರಿಂದ ಅತ್ತಿತ್ತ ತಿರುಗಲಾಗಲಿಲ್ಲ; ನಂಬೂದಿರಿ ಬಾಲವನ್ನು ಬಿಡದೆ ಭದ್ರವಾಗಿ ಹಿಡಿದು ನಿಂತಿದ್ದ. ಬಾಲವನ್ನು ಸಡಲಿಸಿದರೆ ಹುಲಿ ಹುಚ್ಚಿಗೇಳುತ್ತದೆ; ಬಾಲವನ್ನು ಹಿಡಿದುಕೊಂಡೇ ಇದ್ದರೆ ಇವನು ಮನೆ ಸೇರುವಂತಿಲ್ಲ. ಹೀಗಾಗಿದೆ ನಿಮ್ಮ ಪಾಡು" ಎಂದು ಹೇಳಿ ಕಿವಿಯಲ್ಲಿ ಮೆಲ್ಲಗೆ "ಹುಡುಗಿಯರಿಗೆ ಪಾಠ ಹೇಳಿಕೊಡಲು ಹೇಗೆ ತಾನೆ ಒಪ್ಪಿದಿರಿ?'' ಎಂದ. ನನಗೆ ಏನು ಹೇಳಲೂ ತೋರಲಿಲ್ಲ.
ಒಂದು ಮರುಪ್ರಶ್ನೆಯನ್ನು ಮಾತ್ರ ಕೇಳಿದೆ: ''ನಿನ್ನ ಕನ್ಸರ್ವೇಟರು ಆ ಸೊಪ್ಪನ್ನು ಕೊಟ್ಟಾಗ ಆಗಿದು ತಿಂದೆಯಲ್ಲ, ಏಕೆ ಹಾಗೆ ಮಾಡಿದೆ? ನಿನಗೇನು ನೆಗಡಿ ಹಿಡಿದಿತ್ತೆ?'' ಎಂದೆ. ಅವನು ನಗುತ್ತಾ 'ಇಲ್ಲ. ಅದೇ ಸರ್ಕಾರೀ ಕೆಲಸದ ರೀತಿ. ಸರ್ಕಾರೀ ನೌಕರರೆಲ್ಲರೂ ನನ್ನ ಹಾಗೆ, ನಿಮ್ಮ ಹಾಗೆ ಹುಲಿಯ ಬಾಲವನ್ನು ಹಿಡಿದುಕೊಂಡಿರುವವರೇ!'' ಎಂದ.
No comments:
Post a Comment